ಬುಧವಾರ, ಜೂನ್ 10, 2015

ಸಖಿ ಗೀತೆ.....339

ಸಖಿ..

ಬರೀ ಹೂವು ಹಣ್ಣು
ಸುಂದರ ಹೆಣ್ಣು...
ಚಂದ್ರ ತಾರೆ
ಕೊಳದ ತಾವರೆ...
ಅಂತೆಲ್ಲಾ ಕವಿತೆ
ಕೊರೆದವನೆಂಥಾ ಕವಿ...

ಜನರ ನೋವು
ನ್ಯಾಯದ ಸಾವು
ಮಾಯದ ಗಾಯ
ದಾರಿತಪ್ಪಿದ ದ್ಯೇಯ...
ಕುರಿತು ಸ್ಪಂದಿಸದಿದ್ದರೆ
ಅದೆಂತಾ ಕವಿತೆ...

ಅವರಿವರ
ಭಾವ ಬಕುತಿಗೆಲ್ಲಿ
ನೋವಾದೀತೆಂಬ
ಅಳುಕಿರುವಾತ
ಕವಿಯಾಗಲಾರ
ಸಮಾಜದ ಸಂಕಟಕ್ಕೆ
ಕಿವಿಯಾಗಲಾರ...

ಕವಿತೆ
ಕನ್ನಡಿಯಾಗಬೇಕು
ಅಸಮಾನತೆ ತೋರಿಸಲು...
ಮುನ್ನುಡಿಯಾಗಬೇಕು
ಸಮಸಮಾಜ ಕಟ್ಟಲು...
ಬೆನ್ನುಡಿ ಬರೆಯಬೇಕು
ಜಾಗೃತಿ ಮೂಡಿಸಲು...

ದ್ವೇಷ ಹುಟ್ಟುಹಾಕುವ
ಧರ್ಮ ನಾಶವಾಗಲಿ..
ಸಮಾಜ ಒಡೆಯುವ ಜಾತಿ
ನಾಮಾವಶೇಷವಾಗಲಿ..

ಅಸಮಾನತೆಗೆ ಪ್ರೇರೇಪಿಸುವ
ಪುರೋಹಿತಶಾಹಿ ಗಡಿಪಾರಾಗಲಿ...
ಎನ್ನುವ ಪ್ರಜ್ಞೆ ಕವಿಗಿರಲಿ
ಕವಿತೆ ಪೂರ್ವಾಗ್ರಹಗಳ ಕಳಚಿಕೊಳ್ಳಲಿ..

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ