ಮಂಗಳವಾರ, ಜೂನ್ 9, 2015

ಸಖಿ ಗೀತೆ......293

ಸಖಿ...

ಹೇಳಲೇನಿದೆ ಕೇಳದವರಿಗೆ...
ಜೊತೆಗಿದ್ದಾಗ ನಿರ್ಲಕ್ಷಿಸಿ
ದೂರಾದಾಗ ಪರಿತಪಿಸುವ
ಪರಿತ್ಯಕ್ತಾತ್ಮಗಳಿಗೆ.....

ಆತ್ಮೀಯರಾಗಿದ್ದವರ
ಕಾಳಜಿ ಕಳಕಳಿಯ ಬೆಲೆ...
ನಿರಾಕರಿಸದೇ ಅರಿಯುವುದು
ಬದುಕಿನ ಬಹುದೊಡ್ಡ ಕಲೆ....

ಇದ್ದಾಗ ವಿರೋಧಿಸಿ
ಇಲ್ಲವಾದಾಗ ರೋಧಿಸುವ
ಸ್ವಯಂಕೃತಾಪರಾಧಿಗಳಿಗೆ
ಶಿಕ್ಷೆ ಏನಿದೆ ಅಗಲಿಕೆ ಹೊರತು ಪಡಿಸಿ....

ಇಲ್ಲಿ ಯಾರೂ
ಪರಿಪೂರ್ಣರಲ್ಲ
ನ್ಯೂನ್ಯತೆಗಳ ಜೊತೆ
ಬದುಕಲೇ ಬೇಕೆಲ್ಲಾ...!

ತಪ್ಪುಗಳ ಲೆಕ್ಕಹಾಕಿದರೆ
ಸಿಗುವುದು ನಕಾರಗಳೇ....
ತಿಪ್ಪೆಗಳ ಕೆದಕಿದರೆ
ದೊರೆವುದು ತ್ಯಾಜ್ಯಗಳೇ...

ತಪ್ಪು ಒಪ್ಪುಗಳಾಚೆ
ಉಳಿಯಬೇಕಿದೆ ಸಂಬಂಧ...
ಕೊಟ್ಟು ತೆಗೆದುಕೊಳ್ಳುತ್ತಲೇ
ಗಟ್ಟಿಗೊಳ್ಳಬೇಕಿದೆ ಅನುಬಂಧ...

ಯಾವುದೇ ಒಲವು
ಅಕಾಲದಲ್ಲೆಂದೂ ಸಾಯದಿರಲಿ...
ಕಳೆದುಕೊಂಡು ಪರಿತಪಿಸುವ
ದೌರ್ಬಾಗ್ಯ ಯಾರಿಗೂ ಬಾರದಿರಲಿ....!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ