ಶುಕ್ರವಾರ, ಜನವರಿ 31, 2014

ಮನೆಗೆ ಬಂದ ಹೆಣ್ಣು - ಕೆ.ಎಸ್.ಎನ್ ಕವಿತೆ













ಮೊದಲ ದಿನ ಮೌನ
ಅಳುವೇ ತುಟಿಗೆ ಬಂದಂತೆ
ಚಿಂತೆ ಬಿಡಿ ಹೂವ ಮುಡಿದಂತೆ
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ
ಇಷ್ಟು ನಗು, ಮೂಗುತಿಯ
ಮಿಂಚು ಒಳ ಹೊರಗೆ.
ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ

ಮೂರನೆಯ ಸಂಜೆ ಹೆರಳಿನ ತುಂಬ
ದಂಡೆ ಹೂ
ಹೂವಿಗೂ ಜೀವ ಬಂದಂತೆ
ಸಂಜೆಯಲಿ ರಾತ್ರಿ  ಇಳಿದಂತೆ,
ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ.

-ಕೆ.ಎಸ್.ನರಸಿಂಹಸ್ವಾಮಿ

(ಈ ಕವಿತೆಯಲ್ಲಿ ರೂಪಕಗಳ  ಸಾಲು ಸಾಲು ಮೆರವಣಿಗೆ ಇದೆ. ಸಂಕೇತಗಳ ಸರಮಾಲೆ ಇದೆ. ಮದುವೆಯಾಗಿ ಗಂಡನ ಮನೆಗೆ ಬಂದ ನವವಧುವಿನ ತಲ್ಲಣ ತಳಮಳ ಸಂತಸಗಳ ಅನುಭಾವ ಗೀತೆ ಇದೆ. ಕೆ.ಎಸ್.ಎನ್ ರವರ  ಉತ್ತಮ ಪ್ರೇಮ ಕವಿತೆಯಲ್ಲಿ ಇದು ಒಂದು. )

ಗುರುವಾರ, ಜನವರಿ 30, 2014

ಚುಟುಕು ಕವಿತೆಗಳು





ಸಮುದ್ರದ ಅಲೆಗಳು
ಏಳುತ್ತವೆ ಬೀಳುತ್ತವೆ.

ಪ್ರತಿ ಸಲ ಬಿದ್ದಾಗಲೂ
ಮತ್ತೆ ಪುಟಿದೇಳುತ್ತವೆ.

ಬದುಕಲ್ಲಿ ಸೋತವರಿಗೆ
ಪಾಠ ಹೇಳುತ್ತವೆ.

*  *  *  *

ಬದುಕಿನಲ್ಲಿ
ಯಾವ ತತ್ವಗಳಿಗೂ
ನಿಲುಕದ ಸತ್ಯಗಳಿವೆ.

ಪ್ರತಿಯೊಬ್ಬರ ಮನಸ್ಸಿನಲ್ಲಿ
ಯಾರ ಹಂಗಿಗೂ ನಿಲುಕದ
ಅವರವರದೇ ನಂಬಿಕೆಗಳಿವೆ.

*  *  *  *

ಧರ್ಮ ನಿರಪೇಕ್ಷ ಭಾರತದಲ್ಲಿ
ಧರ್ಮವೇ ಬಂಡವಾಳ.

ಬಂಡವಾಳಶಾಹಿ ದೇಶದಲ್ಲಿ
ಅಸಮಾನತೆಯೇ ಅಂತರಾಳ.

*  *  *  *

ಹಿಂದೆ ಮಾಡಿದ ತಪ್ಪುಗಳಿಗೆ
ಇಂದು ಕೊಡುವ ಹೆಸರು ಅನುಭವ.



            -ಶಶಿಕಾಂತ ಯಡಹಳ್ಳಿ

ಜಾಗತೀಕರಣದ ಕೂಸು :




ನೀನು ಕುಡುಕನಲ್ಲವೆಂದು ತಿಳಿದರೆ
ಕುಡಿಯಲು ಹೆಚ್ಚೆಚ್ಚು ಒತ್ತಾಯಿಸುವೆ,

ನಿನಗೆ ನನ್ನ ಸಹಾಯದ  ಅಗತ್ಯವಿಲ್ಲವೆಂದಾಗ
ಸಹಾಯಕ್ಕೆ ಸಾವಿರಪಾಲು ಮುಂದಾಗುವೆ.

ಇದೇ ನನ್ನ ನಿನ್ನ ಕೊನೆಯ ಬೇಟಿ ಎಂದು
ಖಾತ್ರಿಯಾದರೆ ತುಂಬಾ ಪ್ರೀತಿಸುತ್ತೇನೆಂದು ಹೇಳುವೆ,

ಯಾಕೆಂದರೆ ನಾನು ಜಾಗತೀಕರಣದ ಕೂಸು
ಎಲ್ಲದಕ್ಕೂ ಅಳತೆಗೋಲು ಒಂದೇ, ಅದು ಕಾಸು.



                           -ಶಶಿಕಾಂತ ಯಡಹಳ್ಳಿ

ಶಾಸ್ತ್ರ ಏನು ಹೇಳಿದರೇನು?















ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನೀರುಣಿಸಿ ಬಂದ ಸಹೋದರನಿಗೆ ನೀರು ಕೊಡಲು
ಮನುಧರ್ಮ ಶಾಸ್ತ್ರವನು ಗೊರೆಯಬೇಕೇನು?

-ಕುವೆಂಪು